Monday, December 12, 2011

ಭವ ಕೆಸರಿನಿಂದ ಮೇಲೆದ್ದು ಬಂದು

ಓ ನನ್ನ ಅರಿವೇ ಅರಳು

ಮರುಳ ದೇಹದಲಿ ಅರಳಿ ನಿಂತು

ನೀ ಬೆಳಕಿನೆಡೆಗೆ ಮರಳು



ಮೂಲದಿಂದ ಆ ಯೋಗ ನಾಗವು

ಸರಿದು ಹರಿದು ಬರಲಿ

ಪಂಚಭೂತಗಳ ಹೆಡೆಯ ತೆರೆದು

ಅದು ಆರ ಮೀರಿ ನಿಲಲಿ



ಭವ ದಾಟಿ ಬಂದ ಅನುಭವವೇ ಅಂದ

ಅನುಭಾವವಾಗಿ ನಿಂದು

ಜಗವಾಳೋ ಭಗವತ್ ಶಕ್ತಿ ಅಂದು

ನಿಜ ಅರ್ಥದಲ್ಲಿ ಬಂದು



ನನ್ನ ದೇಹವಂದು ನಿಜ ಅರ್ಥದಲ್ಲಿ

ಪ್ರಾಣ ಪೂರ್ಣ ಯಂತ್ರ

ನಾ ಅರಿವೆ ಅಂದು ಗಜ ಗಾತ್ರದಲ್ಲಿ

ಪೂರ್ಣ ಪ್ರಾಣ ಮಂತ್ರ



ನನ್ನ ಮನವು ಇಂದು ಇದು ಯೋನಿ ನಿನಗೆ

ಬಾ ಬಾರೋ ದೇವ ಹುಟ್ಟಿ

ಆತ್ಮ ದೀಪ ಹೊಮಾಗ್ನಿಯಾಗಿ

ಬರುವನು ಸೂರ್ಯ ಹುಟ್ಟಿ



ನನಗಂದ ತಂದ ಅರವಿಂದನಿಂದ

ಈ ಬಾಳ ಗಂಧ ಚಂದ

ಬೆಳಕ ಸುರಿಸಿ ಮಜ್ಜನವಗೈದಳು

ಶ್ರೀಮಾತೆ ಕಣ್ಣಿನಿಂದ

No comments: